Wednesday, April 05, 2017

ಮರ

ಹಸಿರೆಲೆಗಳ ನಡುವೆ ಹೊಳೆಯುತ್ತಿದ್ದ ಕೆಂಪು
ಹಣ್ಣಿನೆದೆಯಿಂದ ಹೊರಗೆಳೆದು
ತನ್ನ ಹೊಟ್ಟೆಯ ಬೆಚ್ಚನಿತ್ತು ಹಿಕ್ಕೆಯಾಗಿ
ಭೂಮಿಗಿತ್ತಿದ್ದು ಕಪ್ಪು ಕಾಜಾಣ

ಕಾರ್ಮೋಡಗಳ ಆರ್ಭಟಗಳ ನಡುವೆ
ಬೆನ್ನ ಮೇಲೊತ್ತು ಹರಿದು ಹರಡಿ
ಭೋರ್ಗರೆದು ಸುಳಿದಾಡಿ ಕೆಂಪು ಮಣ್ಣಿನ
ಅಪ್ಪುಗೆಗೆಯೊಪ್ಪಿಸಿದ್ದು ಕಪ್ಪು ನದಿ

ನೆಲದ ಕಸುವು, ಬೀಸುವ ತಂಬೆರಲಿನ
ತರು ಲತೆಗಳೊಡನಾಟದ ಟಿಸಿಲಾಟಗಳಿಗೆ
ಗೆಳೆಯರಾಗಿ ಬಂದು ಚಿಗುರ ಕಚ್ಚಿ ಹಿಗ್ಗಿ ಹರಡಿಸಿದವರು
ಕಪ್ಪು ಉಣ್ಣೆಯ ನಾಗಲಾಟದ ಮಿತ್ರರು!

ಹಿಗ್ಗಿ ಬೆಳೆದು ಮೇಘಗಳಿಗೆ ಮುತ್ತಿಕ್ಕಿ
ಸಂದು ಕೊರಕಲುಗಳಲ್ಲಿ ಮನೆಯನಿತ್ತು
ಕೋಟಿ ಮನಸುಗಳ ತಂದು ಮೈಮೇಲೆ
ಪುಟ್ಟ ಹೆಜ್ಜೆಯನಿಡಿಸಿದವರು
ಅಳಿಲು ಪಕ್ಷಿ ಕೀಟ ವಾನರ ಮೂಷಕರು!

ಕಿತ್ತು ಕತ್ತರಿಸಿ ಛೇದಿಸಿ ಉದುರಿಸಿ
ಬೀಳಿಸಿ ಬೇಧಿಸಿ ತಿಕ್ಕಿ ಗುದ್ದಿ ಹೊಡೆದು
ಹೇರಿ ಎಳೆಸಿ ಮುರಿದು ಕೊಳೆಸಿ
ಕೆಟ್ಟ ಮೂಲೆಗೆ ತಳ್ಳಿದವರು ಮಾನವರು

- ಪ್ರಸನ್ನ ರೇವನ್