Wednesday, September 05, 2018

ಶ್ಲೋಕತ್ವ ಮಾಗತಃ

ನಟ್ಟಿರುಳಿನ ಕಗ್ಗತ್ತಲ
ನೀರವ ಮೌನದ ಗೆಳೆತನ,
ನನ್ನತನದ ನೋವು ನನ್ನೊಳಗೆ
ಮಿಣುಕುವ ಪುಟ್ಟ ದೀಪ

ನೆರಳ ಕೈ ಹಿಡಿದು ನೆಡೆದು
ಎಡವಿ ನೆರಳಾಗಿ ಬಿಡುವ ಹಂಬಲ,
ಮಳೆನಿಂತು ಹೊತ್ತಾದರೂ
ತೊಟ್ಟಿಕ್ಕುವ ಹೆಂಚಿನ ತುದಿ

ನಾನೇನೇ ಆದರೂ ನಾನಾಗದ
ಅದೆಷ್ಟು ಅನುಭವಗಳು?
ಸುತ್ತಲಿನ ಪ್ರಪಂಚದ ತುಂಬ
ಮುಗಿಯದ ಹಾಡುಗಳೆಷ್ಟು?

ಬದಲಾಗುವ ಬೆಳಕಿನ
ಜಗತ್ತಿನಲ್ಲಿ ಬದಲಾಗುತ್ತಲೇ
ಬೆತ್ತಲಾಗುವ ಮೈಮನಗಳ,
ಒಳಸುಳಿಗಳ ಅಮಾಯಕತೆ
ನನ್ನ ನಿಜವಾದ ಆಸ್ತಿ, ಅಥವಾ ಅಸ್ತಿ...

-ಪ್ರಸನ್ನ

Tuesday, June 26, 2018

ಮುಗುದೆ

ಚಾಚಿದ ಹವಳದ ಬೆರಳುಗಳು
ಗಾಳಿಗೆ ಒದೆಯುವ ಎಳೆ ಸಂಪಿಗೆಯ ಪಾದ
ಹೊಳೆಯುವ ಕಪ್ಪು ರಾತ್ರಿಯಂಥ ಕಣ್ಣುಗಳಿಂದ
ಇಣುಕಿದ್ದು ಬೆಳದಿಂಗಳಿನ ಆಪ್ತತೆ

ದಿಗಂತದ ಬೊಟ್ಟಿನಂತ ದಿಟ್ಟ ನೋಟ
ಮಲ್ಲಿಗೆಯ ದಂಡೆಯಂಥಾ
ಹಾತೊರೆಯುವ ಬಾಹುಗಳು
ಜೇನಿನ ಕೆನ್ನೆಗಳಿಂದ ಜಾರಿ ಬಂದ
ಪುಟ್ಟ ಕೇಕೆ ಕಿವಿಗೆ ಸಿಹಿ ಸುರಿದಂತೆ

ತಾವರೆ ಎಸಳಿನಂಥ ತುಟಿಗಳಿಂದ
ಚಾಚಿದ ಮುಗ್ಧ ನಗುವ ಕಂಡ ಕಣ್ಣು
ಕಾಣುವ ಕನಸೆಲ್ಲವೂ ಗುಲಾಬಿಯೇ!
ಆ ನನಸಾದ ಕನಸಿನ ಹೆಸರೇ ಸನ್ಮಯ!

-ಪ್ರಸನ್ನ

ಯಾಕೆ?

ಹೊರಗೆ ಭರ್ರನೆ ಸುರಿಯುತ್ತಿರುವ ಮಳೆ,
ಒಳಗೆ ಸಿಡಿಯುವ ಗುಡುಗು ಮಿಂಚು
ನಿನ್ನ ಮೆದು ತುಟಿ ಮತ್ತು ಪಾದಗಳ ಅಚ್ಚು,
ನನ್ನ ಎದೆಯ ಮೇಲೆ ಇನ್ನೂ ಹಾಗೆಯೇ ಇವೆ.


ದೇಶ ಕಾಲಗಳು ನುಗ್ಗುವ ರೈಲಿನಂತೆ ಸರಿದರೂ
ನಿರಂತರವಾಗಿ ಜೀಕುವ ಜೋಕಾಲಿಯಂತೆ
ಕನಸು, ನೋವು, ದುಗುಡ, ಮೌನದೊಳಗಿಂದ
ಆಗಾಗ ಇಣುಕುವ ನಿನ್ನಿಂದ ದೂರ ಹೇಗೆ ಸಾಧ್ಯ?

ಸುಟ್ಟ ಹೃದಯ ಬೆಂಕಿಯನ್ನು ಪ್ರೀತಿಸುವಂತೆ
ಕಣ್ಣೀರಿನಲ್ಲೂ, ಕಾಡಿನಲ್ಲೂ, ಕತ್ತಲಲ್ಲೂ, ಕಡೆಗೆ
ಕನಸಿನಲ್ಲೂ ನನ್ನನ್ನು ಒಂಟಿಯಾಗಿ ಬಿಡದ ನೀನು
ನನ್ನನ್ನು ಅಗಲಿದ್ದಾದರೂ ಯಾಕೆ?

-ಪ್ರಸನ್ನ

Thursday, May 24, 2018

ಬೇಸಗೆಯ ರಾತ್ರಿಗಳು


ಬೇಸಗೆಯ ರಾತ್ರಿಗಳು
ಬೇಸರದ ಕನಸುಗಳು
ಬೀಸದ ಗಾಳಿಗೆ ಅಲುಗದ ಎಲೆಗಳು
ಮುಚ್ಚಿಟ್ಟ ಮಾತುಗಳ
ಬಚ್ಚಿಟ್ಟ ಆಸೆಗಳ
ಬಿಚ್ಚಿ ನೋಡದ ಮನಸಿನೊಳಗಿನ
ಬೆಚ್ಚನೆಯ ಹರೆಯವ 
ಕುಚ್ಚುವ ಬೆಳದಿಂಗಳ
ದಿಟ್ಟಿಸುವ ಕಣ್ಣುಗಳೊಳಗೆ
ಭುಗಿಲೆದ್ದು ಉರಿಯುವ
ಬುಸುಗುಡುವ ರಾತ್ರಿಗಳು

-ಪ್ರಸನ್ನ ರೇವನ್


Tuesday, April 03, 2018

ದಾವಣಗೆರೆ ಎಂದರೆ

ದಾವಣಗೆರೆ ಎಂದರೆ

ಮಲೆನಾಡು ಬಯಲುಸೀಮೆ ಉತ್ತರ ದಕ್ಷಿಣ
ಕರ್ಣಾಟದ ಹಗ್ಗ ಜಗ್ಗಾಟಗಳ ಮಧ್ಯೆ
ಘನವಾಗಿ ನಿಂತ ಬಯಲು

ಮಿಲ್ಲುಗಳ, ಕಾರ್ಮಿಕರ
ಕಾಮ್ರೇಡುಗಳ ಕೆಂಪುಧ್ವಜಗಳನ್ನು
ಮಾಲೀಕರ ಕಾಲ್ತುಳಿತವನ್ನೂ
ಒಡಲಲ್ಲಿ ಹಾಕಿ ನಿಂತ ಸಾಕ್ಷಿಪ್ರಜ್ಞೆ

ತಾಯಿ ದುಗ್ಗವ್ವನ ಮುಂದೆ
ಚೆಂಡಾಡಿದ ಕುರಿ ಕೋಣಗಳ ತಲೆ,
ಸುರಿದ ಕೋಡಿ ರಕ್ತ ತೊರೆಗಳು
ನರನಾಡಿಯಂತೆ ಹರಿದ
ಬೀದಿಗಳ ಸಾಲು

ಮಳೆ ಹನಿಯದಿದ್ದಾಗ ಬಸವಳಿದ ಜನ
ಅದೇ ತಾಯಿ ದುಗ್ಗವ್ವನ ಮುಂದೆ ಸಂತೆ ನೆರೆದು
ದೈವಕ್ಕೇ ಪ್ರತಿಭಟಿಸಲು ಹಿಮ್ಮೆಟ್ಟದ
ಮುಗ್ಧ ಮಾನಸರ ತವರು 

ಹೊಯ್ಸಳ ನಾಯಕ, ಹೈದರಾದಿಯಾಗಿ
ಮರಾಠರು ಆಳಿದರೂ ಕನ್ನಡದ ಕೈ ಬಿಡದ
ಲಕ್ಷ್ಮಿಯಾಳುವ ಸರಸ್ವತಿ ಕಾಣುವ 
ವಿದ್ಯೆಯ ಚಿಮ್ಮಿಸುವ ಆಗ್ರಹದ ಅಗ್ರಹಾರ

ಹಳೆಪೇಟೆ, ಹೊಸ ಪೇಟೆಗಳೆನ್ನದೇ
ಎಲ್ಲರಿಗೂ ಮಂಡೀಪೇಟೆಯ
ರುಚಿ ತೋರಿಸಿದರೂ ದಾನಕ್ಕೆ
ಚೆಲ್ಲಿದ ರೊಕ್ಕದ ಲೆಕ್ಕ ಇಡದ ಮಂದಿ


ವಿರಕ್ತರಿಗೆ ವೈರಾಗ್ಯವನ್ನೂ
ವೀರರಿಗೆ ಕಿರೀಟ ಪಲ್ಲಕ್ಕಿಯನ್ನೂ
ಬಸವನ ಹಾದಿ ಹಿಡಿದವರಿಗೆ
ದಾಸೋಹವನ್ನಿತ್ತ ವಣಿಕರೂರು 

ಪಟ್ಟಣವಾಗಿ ಬೆಳೆದರೂ ಗ್ರಾಮ್ಯ
ಆಚರಣೆಗಳನ್ನು ಬಿಡದ, ಶಿವರಾತ್ರಿ ನವರಾತ್ರಿ,
ಪಂಚಮಿ, ಹಟ್ಟಿ, ಮಹೇಶ್ವರ, ಬಕ್ಕೇಶ್ವರ ಎಲ್ಲ
ಹಬ್ಬಗಳನ್ನೂ ಸಾಲಮಾಡಿಯಾದರೂ
ಸಂಭ್ರಮಿಸುವ ಜನ

ಬೆಳ್ಳುಳ್ಳಿ ಖಾರ ನರ್ಗಿಸ್ ಮಂಡಕ್ಕಿ
ಮಿರ್ಚಿ, ಉದ್ದಿನೊಡೆ, ಗುಳಾಡಿಕೆ ಉಂಡಿ,
ಓಪನ್ ಖಾಲಿ ಬೆಣ್ಣೆದೋಸೆ, ಉಸುಲು, ಸೂಸಲು
ಮೆಲ್ಲುತ್ತಲೇ ಎಲ್ಲ ಮರೆಯುವ ರಸಿಕರೂರು

ಬಾಯಿಂದ ಮಾತಿನ ತಾಂಬೂಲ ಉಗಿದರೂ
ಹೆಗಲ ಮೇಲೆ ಕೈಹಾಕಿ ಸ್ವಾಗತಿಸುವ
ವಿಶೇಷ ಬೈಗುಳಗಳಲ್ಲಿ ದೇಶಕ್ಕೇ ಮೊದಲು
ನಿಲ್ಲಬಹುದಾದ ಸೃಜನಶೀಲ ಜನಪದ

ಸರ್ಪದಹುಣ್ಣಿಗೆ ಗರುಡನ ಚಿತ್ರ
ಹೊಟ್ಟೆ ನೋವಿಗೆ ಅರಿಶಿನಕೊಂಬಿನ ಚುಟುಕು
ಭಟ್ಟಿ ಬಿದ್ದದ್ದಕ್ಕೆ ಕಾಲು ನೀವಿದ ನಾಟಿವೈದ್ಯರಳಿದು
ದೇಶಕ್ಕೇ ಅಲೋಪತಿ ಡಾಕ್ಟರುಗಳನ್ನು
ಸಪ್ಲೈ ಮಾಡುವ ವಿದ್ಯಾಕ್ಷೇತ್ರ

ನಾಟಕ ಕಂಪನಿಗಳು ಹುಲುಸಾಗಿ ಬೆಳೆದ
ಅಭಿಯಂತರರಿಗೂ ರಂಗದ ರುಚಿ ಹತ್ತಿಸಿದ
ಕುಸ್ತಿ ಚಿತ್ರ ಸಂಗೀತ ಸಾಹಿತ್ಯಕ್ಕೆ ಬೆನ್ನಾಗಿ ನಿಂತ
ಅರಿಯದಿದ್ದರೂ ಮೆಚ್ಚುವ ರಸಪ್ರಜ್ಞೆ 

ಗುಡ್ಡ ಬೆಟ್ಟ ಪುರಾತನ ದೇಗುಲ ಕೋಟೆ
ನದಿ ಅರಮನೆ ವಾಡೆ ಐತಿಹ್ಯ ರಾಜಮನೆತನ
ಸಾಂಸ್ಕೃತಿಕ ಇತಿಹಾಸ ಇತ್ಯಾದಿ ಏನಿಲ್ಲದಿದ್ದರೂ
ಬಯಲಿನ ನಡುವೆ ಓಯಸಿಸ್ ನಂತೆ ನಾಡಿಗೆ
ಅಕ್ಷರಶಃ ಕೇಂದ್ರವಾಗಿ ನಿಂತ ಮೊದಲಿಗರೂರು
ನನ್ನ ತಾಯ್ನೆಲ ಸುಂದರ ಸೂರ್ಯಾಸ್ತಗಳ
ಬೆಳಕಿನೂರು ದಾವಣಗೆರೆ!

-ಪ್ರಸನ್ನ ರೇವನ್

Friday, March 02, 2018

ಭವಿತವ್ಯ ಮತ್ತು ಪ್ರೇಮ


ತಟಕ್ಕನೆ ಬಿದ್ದ ಸಣ್ಣ ಮಳೆಹನಿಯೊಂದು
ಎಳೆ ಚಿಗುರಿನ ಮೇಲೆ ಬರೆದ ನೀರಿನ ಗೆರೆ

ಬೆಟ್ಟದ ನೆತ್ತಿಯ ಗಿಡ ಮರಗಳೊಳಗೆ
ತಣ್ಣಗೆ ಹಾಯ್ದು ಜಾರಿದ ಬೆಳ್ಮೋಡಗಳು

ಬಳ್ಳಿಗಿಂತ ಆಪ್ತವಾಗಿ ರೆಂಬೆಯನ್ನು
ಬೆಚ್ಚಗೆ ಅಪ್ಪಿದ ಮಿಡಿನಾಗರ

ಮುಟ್ಟಲಾಗದ ಬೈಗುಗೆಂಪಿನಲ್ಲಿ
ಅಡಗಿರುವ ಬಣ್ಣಗಳ ಓಕುಳಿ

ಮರಳ ಕಣಕ್ಕೆ ದಿನವೂ ಮುತ್ತಿಟ್ಟು
ಮುತ್ತಾಗಿಸುವ ಚಿಪ್ಪಿನೊಳಗಿನ ಜೀವದ ಕನಸು

ಬೆಳಕಿನ ನಿರೀಕ್ಷೆಯಿಂದ ನೆಲದಡಿಯ
ಕತ್ತಲಿನಲ್ಲಿ ಮೊಳೆಯುವ ಬೀಜದ ಕಾತರ

ಎಂದೋ ಹುಟ್ಟುವ ಮಗುವಿಗಾಗಿ
ಹಂಬಲಿಸುವ ತಾಯ ಮೊಲೆಗಳು

ಕಾಲವನ್ನು ಮೆಟ್ಟಿ ನಿಲ್ಲಲು ಪ್ರೀತಿಗಲ್ಲದೇ
ಮತ್ಯಾರಿಗೆ ಸಾಧ್ಯ?


- ಪ್ರಸನ್ನ ರೇವನ್