Wednesday, September 05, 2018

ಶ್ಲೋಕತ್ವ ಮಾಗತಃ

ನಟ್ಟಿರುಳಿನ ಕಗ್ಗತ್ತಲ
ನೀರವ ಮೌನದ ಗೆಳೆತನ,
ನನ್ನತನದ ನೋವು ನನ್ನೊಳಗೆ
ಮಿಣುಕುವ ಪುಟ್ಟ ದೀಪ

ನೆರಳ ಕೈ ಹಿಡಿದು ನೆಡೆದು
ಎಡವಿ ನೆರಳಾಗಿ ಬಿಡುವ ಹಂಬಲ,
ಮಳೆನಿಂತು ಹೊತ್ತಾದರೂ
ತೊಟ್ಟಿಕ್ಕುವ ಹೆಂಚಿನ ತುದಿ

ನಾನೇನೇ ಆದರೂ ನಾನಾಗದ
ಅದೆಷ್ಟು ಅನುಭವಗಳು?
ಸುತ್ತಲಿನ ಪ್ರಪಂಚದ ತುಂಬ
ಮುಗಿಯದ ಹಾಡುಗಳೆಷ್ಟು?

ಬದಲಾಗುವ ಬೆಳಕಿನ
ಜಗತ್ತಿನಲ್ಲಿ ಬದಲಾಗುತ್ತಲೇ
ಬೆತ್ತಲಾಗುವ ಮೈಮನಗಳ,
ಒಳಸುಳಿಗಳ ಅಮಾಯಕತೆ
ನನ್ನ ನಿಜವಾದ ಆಸ್ತಿ, ಅಥವಾ ಅಸ್ತಿ...

-ಪ್ರಸನ್ನ

Tuesday, June 26, 2018

ಮುಗುದೆ

ಚಾಚಿದ ಹವಳದ ಬೆರಳುಗಳು
ಗಾಳಿಗೆ ಒದೆಯುವ ಎಳೆ ಸಂಪಿಗೆಯ ಪಾದ
ಹೊಳೆಯುವ ಕಪ್ಪು ರಾತ್ರಿಯಂಥ ಕಣ್ಣುಗಳಿಂದ
ಇಣುಕಿದ್ದು ಬೆಳದಿಂಗಳಿನ ಆಪ್ತತೆ

ದಿಗಂತದ ಬೊಟ್ಟಿನಂತ ದಿಟ್ಟ ನೋಟ
ಮಲ್ಲಿಗೆಯ ದಂಡೆಯಂಥಾ
ಹಾತೊರೆಯುವ ಬಾಹುಗಳು
ಜೇನಿನ ಕೆನ್ನೆಗಳಿಂದ ಜಾರಿ ಬಂದ
ಪುಟ್ಟ ಕೇಕೆ ಕಿವಿಗೆ ಸಿಹಿ ಸುರಿದಂತೆ

ತಾವರೆ ಎಸಳಿನಂಥ ತುಟಿಗಳಿಂದ
ಚಾಚಿದ ಮುಗ್ಧ ನಗುವ ಕಂಡ ಕಣ್ಣು
ಕಾಣುವ ಕನಸೆಲ್ಲವೂ ಗುಲಾಬಿಯೇ!
ಆ ನನಸಾದ ಕನಸಿನ ಹೆಸರೇ ಸನ್ಮಯ!

-ಪ್ರಸನ್ನ

ಯಾಕೆ?

ಹೊರಗೆ ಭರ್ರನೆ ಸುರಿಯುತ್ತಿರುವ ಮಳೆ,
ಒಳಗೆ ಸಿಡಿಯುವ ಗುಡುಗು ಮಿಂಚು
ನಿನ್ನ ಮೆದು ತುಟಿ ಮತ್ತು ಪಾದಗಳ ಅಚ್ಚು,
ನನ್ನ ಎದೆಯ ಮೇಲೆ ಇನ್ನೂ ಹಾಗೆಯೇ ಇವೆ.


ದೇಶ ಕಾಲಗಳು ನುಗ್ಗುವ ರೈಲಿನಂತೆ ಸರಿದರೂ
ನಿರಂತರವಾಗಿ ಜೀಕುವ ಜೋಕಾಲಿಯಂತೆ
ಕನಸು, ನೋವು, ದುಗುಡ, ಮೌನದೊಳಗಿಂದ
ಆಗಾಗ ಇಣುಕುವ ನಿನ್ನಿಂದ ದೂರ ಹೇಗೆ ಸಾಧ್ಯ?

ಸುಟ್ಟ ಹೃದಯ ಬೆಂಕಿಯನ್ನು ಪ್ರೀತಿಸುವಂತೆ
ಕಣ್ಣೀರಿನಲ್ಲೂ, ಕಾಡಿನಲ್ಲೂ, ಕತ್ತಲಲ್ಲೂ, ಕಡೆಗೆ
ಕನಸಿನಲ್ಲೂ ನನ್ನನ್ನು ಒಂಟಿಯಾಗಿ ಬಿಡದ ನೀನು
ನನ್ನನ್ನು ಅಗಲಿದ್ದಾದರೂ ಯಾಕೆ?

-ಪ್ರಸನ್ನ

Thursday, May 24, 2018

ಬೇಸಗೆಯ ರಾತ್ರಿಗಳು


ಬೇಸಗೆಯ ರಾತ್ರಿಗಳು
ಬೇಸರದ ಕನಸುಗಳು
ಬೀಸದ ಗಾಳಿಗೆ ಅಲುಗದ ಎಲೆಗಳು
ಮುಚ್ಚಿಟ್ಟ ಮಾತುಗಳ
ಬಚ್ಚಿಟ್ಟ ಆಸೆಗಳ
ಬಿಚ್ಚಿ ನೋಡದ ಮನಸಿನೊಳಗಿನ
ಬೆಚ್ಚನೆಯ ಹರೆಯವ 
ಕುಚ್ಚುವ ಬೆಳದಿಂಗಳ
ದಿಟ್ಟಿಸುವ ಕಣ್ಣುಗಳೊಳಗೆ
ಭುಗಿಲೆದ್ದು ಉರಿಯುವ
ಬುಸುಗುಡುವ ರಾತ್ರಿಗಳು

-ಪ್ರಸನ್ನ ರೇವನ್


Tuesday, April 03, 2018

ದಾವಣಗೆರೆ ಎಂದರೆ

ದಾವಣಗೆರೆ ಎಂದರೆ

ಮಲೆನಾಡು ಬಯಲುಸೀಮೆ ಉತ್ತರ ದಕ್ಷಿಣ
ಕರ್ಣಾಟದ ಹಗ್ಗ ಜಗ್ಗಾಟಗಳ ಮಧ್ಯೆ
ಘನವಾಗಿ ನಿಂತ ಬಯಲು

ಮಿಲ್ಲುಗಳ, ಕಾರ್ಮಿಕರ
ಕಾಮ್ರೇಡುಗಳ ಕೆಂಪುಧ್ವಜಗಳನ್ನು
ಮಾಲೀಕರ ಕಾಲ್ತುಳಿತವನ್ನೂ
ಒಡಲಲ್ಲಿ ಹಾಕಿ ನಿಂತ ಸಾಕ್ಷಿಪ್ರಜ್ಞೆ

ತಾಯಿ ದುಗ್ಗವ್ವನ ಮುಂದೆ
ಚೆಂಡಾಡಿದ ಕುರಿ ಕೋಣಗಳ ತಲೆ,
ಸುರಿದ ಕೋಡಿ ರಕ್ತ ತೊರೆಗಳು
ನರನಾಡಿಯಂತೆ ಹರಿದ
ಬೀದಿಗಳ ಸಾಲು

ಮಳೆ ಹನಿಯದಿದ್ದಾಗ ಬಸವಳಿದ ಜನ
ಅದೇ ತಾಯಿ ದುಗ್ಗವ್ವನ ಮುಂದೆ ಸಂತೆ ನೆರೆದು
ದೈವಕ್ಕೇ ಪ್ರತಿಭಟಿಸಲು ಹಿಮ್ಮೆಟ್ಟದ
ಮುಗ್ಧ ಮಾನಸರ ತವರು 

ಹೊಯ್ಸಳ ನಾಯಕ, ಹೈದರಾದಿಯಾಗಿ
ಮರಾಠರು ಆಳಿದರೂ ಕನ್ನಡದ ಕೈ ಬಿಡದ
ಲಕ್ಷ್ಮಿಯಾಳುವ ಸರಸ್ವತಿ ಕಾಣುವ 
ವಿದ್ಯೆಯ ಚಿಮ್ಮಿಸುವ ಆಗ್ರಹದ ಅಗ್ರಹಾರ

ಹಳೆಪೇಟೆ, ಹೊಸ ಪೇಟೆಗಳೆನ್ನದೇ
ಎಲ್ಲರಿಗೂ ಮಂಡೀಪೇಟೆಯ
ರುಚಿ ತೋರಿಸಿದರೂ ದಾನಕ್ಕೆ
ಚೆಲ್ಲಿದ ರೊಕ್ಕದ ಲೆಕ್ಕ ಇಡದ ಮಂದಿ


ವಿರಕ್ತರಿಗೆ ವೈರಾಗ್ಯವನ್ನೂ
ವೀರರಿಗೆ ಕಿರೀಟ ಪಲ್ಲಕ್ಕಿಯನ್ನೂ
ಬಸವನ ಹಾದಿ ಹಿಡಿದವರಿಗೆ
ದಾಸೋಹವನ್ನಿತ್ತ ವಣಿಕರೂರು 

ಪಟ್ಟಣವಾಗಿ ಬೆಳೆದರೂ ಗ್ರಾಮ್ಯ
ಆಚರಣೆಗಳನ್ನು ಬಿಡದ, ಶಿವರಾತ್ರಿ ನವರಾತ್ರಿ,
ಪಂಚಮಿ, ಹಟ್ಟಿ, ಮಹೇಶ್ವರ, ಬಕ್ಕೇಶ್ವರ ಎಲ್ಲ
ಹಬ್ಬಗಳನ್ನೂ ಸಾಲಮಾಡಿಯಾದರೂ
ಸಂಭ್ರಮಿಸುವ ಜನ

ಬೆಳ್ಳುಳ್ಳಿ ಖಾರ ನರ್ಗಿಸ್ ಮಂಡಕ್ಕಿ
ಮಿರ್ಚಿ, ಉದ್ದಿನೊಡೆ, ಗುಳಾಡಿಕೆ ಉಂಡಿ,
ಓಪನ್ ಖಾಲಿ ಬೆಣ್ಣೆದೋಸೆ, ಉಸುಲು, ಸೂಸಲು
ಮೆಲ್ಲುತ್ತಲೇ ಎಲ್ಲ ಮರೆಯುವ ರಸಿಕರೂರು

ಬಾಯಿಂದ ಮಾತಿನ ತಾಂಬೂಲ ಉಗಿದರೂ
ಹೆಗಲ ಮೇಲೆ ಕೈಹಾಕಿ ಸ್ವಾಗತಿಸುವ
ವಿಶೇಷ ಬೈಗುಳಗಳಲ್ಲಿ ದೇಶಕ್ಕೇ ಮೊದಲು
ನಿಲ್ಲಬಹುದಾದ ಸೃಜನಶೀಲ ಜನಪದ

ಸರ್ಪದಹುಣ್ಣಿಗೆ ಗರುಡನ ಚಿತ್ರ
ಹೊಟ್ಟೆ ನೋವಿಗೆ ಅರಿಶಿನಕೊಂಬಿನ ಚುಟುಕು
ಭಟ್ಟಿ ಬಿದ್ದದ್ದಕ್ಕೆ ಕಾಲು ನೀವಿದ ನಾಟಿವೈದ್ಯರಳಿದು
ದೇಶಕ್ಕೇ ಅಲೋಪತಿ ಡಾಕ್ಟರುಗಳನ್ನು
ಸಪ್ಲೈ ಮಾಡುವ ವಿದ್ಯಾಕ್ಷೇತ್ರ

ನಾಟಕ ಕಂಪನಿಗಳು ಹುಲುಸಾಗಿ ಬೆಳೆದ
ಅಭಿಯಂತರರಿಗೂ ರಂಗದ ರುಚಿ ಹತ್ತಿಸಿದ
ಕುಸ್ತಿ ಚಿತ್ರ ಸಂಗೀತ ಸಾಹಿತ್ಯಕ್ಕೆ ಬೆನ್ನಾಗಿ ನಿಂತ
ಅರಿಯದಿದ್ದರೂ ಮೆಚ್ಚುವ ರಸಪ್ರಜ್ಞೆ 

ಗುಡ್ಡ ಬೆಟ್ಟ ಪುರಾತನ ದೇಗುಲ ಕೋಟೆ
ನದಿ ಅರಮನೆ ವಾಡೆ ಐತಿಹ್ಯ ರಾಜಮನೆತನ
ಸಾಂಸ್ಕೃತಿಕ ಇತಿಹಾಸ ಇತ್ಯಾದಿ ಏನಿಲ್ಲದಿದ್ದರೂ
ಬಯಲಿನ ನಡುವೆ ಓಯಸಿಸ್ ನಂತೆ ನಾಡಿಗೆ
ಅಕ್ಷರಶಃ ಕೇಂದ್ರವಾಗಿ ನಿಂತ ಮೊದಲಿಗರೂರು
ನನ್ನ ತಾಯ್ನೆಲ ಸುಂದರ ಸೂರ್ಯಾಸ್ತಗಳ
ಬೆಳಕಿನೂರು ದಾವಣಗೆರೆ!

-ಪ್ರಸನ್ನ ರೇವನ್

Friday, March 02, 2018

ಭವಿತವ್ಯ ಮತ್ತು ಪ್ರೇಮ


ತಟಕ್ಕನೆ ಬಿದ್ದ ಸಣ್ಣ ಮಳೆಹನಿಯೊಂದು
ಎಳೆ ಚಿಗುರಿನ ಮೇಲೆ ಬರೆದ ನೀರಿನ ಗೆರೆ

ಬೆಟ್ಟದ ನೆತ್ತಿಯ ಗಿಡ ಮರಗಳೊಳಗೆ
ತಣ್ಣಗೆ ಹಾಯ್ದು ಜಾರಿದ ಬೆಳ್ಮೋಡಗಳು

ಬಳ್ಳಿಗಿಂತ ಆಪ್ತವಾಗಿ ರೆಂಬೆಯನ್ನು
ಬೆಚ್ಚಗೆ ಅಪ್ಪಿದ ಮಿಡಿನಾಗರ

ಮುಟ್ಟಲಾಗದ ಬೈಗುಗೆಂಪಿನಲ್ಲಿ
ಅಡಗಿರುವ ಬಣ್ಣಗಳ ಓಕುಳಿ

ಮರಳ ಕಣಕ್ಕೆ ದಿನವೂ ಮುತ್ತಿಟ್ಟು
ಮುತ್ತಾಗಿಸುವ ಚಿಪ್ಪಿನೊಳಗಿನ ಜೀವದ ಕನಸು

ಬೆಳಕಿನ ನಿರೀಕ್ಷೆಯಿಂದ ನೆಲದಡಿಯ
ಕತ್ತಲಿನಲ್ಲಿ ಮೊಳೆಯುವ ಬೀಜದ ಕಾತರ

ಎಂದೋ ಹುಟ್ಟುವ ಮಗುವಿಗಾಗಿ
ಹಂಬಲಿಸುವ ತಾಯ ಮೊಲೆಗಳು

ಕಾಲವನ್ನು ಮೆಟ್ಟಿ ನಿಲ್ಲಲು ಪ್ರೀತಿಗಲ್ಲದೇ
ಮತ್ಯಾರಿಗೆ ಸಾಧ್ಯ?


- ಪ್ರಸನ್ನ ರೇವನ್  

Thursday, October 26, 2017

ಶಿಕಾರಿಪುರ



ಶಿಕಾರಿಪುರ ಎಂದರೆ

ಮಿಡಿ ಮಾವು, ಬಾಳೆ ಮೀನು, ಗೌರೀಭತ್ತ,
ಯಾಡೇರು ಮಾರುವ ಗೋಡಂಬಿ ಹಣ್ಣು
ಅಡುಗೆ ಮನೆಯಲ್ಲಿ ಅಲ್ಲಲ್ಲಿ ಚಲ್ಲಿದ ಅಕ್ಕಿಯ ಗಂಜಿ
ಸಾಗುವಾನಿಮರದ ಮನೆಗಳ ನಡುವೆ
ಬರುವ ಅಡುಗೆ ಮನೆ ಹೊಗೆಯ ವಾಸನೆ...

ಹಚ್ಚಹಸುರಿನ ಭತ್ತದ ಗದ್ದೆಗಳ ನಡುವೆ
ಸಿಕ್ಕುವ ಬುರ್ಲಿ ಹಕ್ಕಿಗಳ ಚಿತ್ತಾರದ ಮೊಟ್ಟೆಗಳು
ಅಜ್ಜಿ ಮಾಡುತ್ತಿದ್ದ ಹುಲ್ಲೇಡಿ ಸಾರು
ವರ್ಣರಂಜಿತ ಜೀರುಗೊಂಬೆ...
ಅಜ್ಜನ ಅಂಗಿಯ ಬೆವರಿನ ಗಂಧ...

ಸಗಣಿ ಸಾರಿಸಿದ ಹಸಿರು ಕೇರಿ ಬೀದಿಯ
ತುಂಬಾ ನಗುವಿನ ರಂಗೋಲಿ
ಹೊಯ್ಯಪ್ಪಳ, ಮೊಸರು ಮೆಣಸಿನಕಾಯಿ
ಕರಿಬೇಟೆಯ ಸಾರು, ಸೆಣಗಿ ಹುಗ್ಗಿಯ ಘಮಲು

ಸ್ನಿಗ್ಧ ಚಲುವಿನ ಮುಗ್ಧ ಮುಖಗಳು
ಹಿತ್ತಲಿನ ಭೂತಪ್ಪ, ನಾಗರ ಕಲ್ಲು
ಮನೆಯೊಳಗೆ ಬೀರಪ್ಪನ ಹೊಳೆಯುವ ಅಲಗು
ಬಂಗಾರಬಣ್ಣದ ತಿಪ್ಪೆಯುದ್ದಕ್ಕೊ ಹರಡಿದ ಅಣಬೆ ಸಾಲು

ಅಲ್ಲೊಂದು ಇಲ್ಲೊಂದು ಹಳೆಯಮರ
ಸಂತೆಯುದ್ದಕ್ಕೊ ಮೈಚಾಚಿದ ದೇವಿಯ ನೆಲ ಶಿಲ್ಪ
ಕೆನ್ನೆ ಕಚ್ಚುವ, ನಗೆಚಾಟಿಕೆಯ ಚಿಕ್ಕಮ್ಮ, ಮಾವಂದಿರು
ದಿನಕೊಂದು ಹೊಸ ಹಾಡು ಹೊಸೆವ
ಜಾನಪದವೇ ಮೈವೆತ್ತಂತ ಅಜ್ಜಿಯ ಕೊರಳು...

ಅರವತ್ತಾದರೂ ರಾಶಿ ಸೌದೆಕೊಚ್ಚುವ ಅಜ್ಜ
ಸಣಿಗೆ ಹುಗ್ಗಿಯ ಸವಿ ಚಪ್ಪರಿಕೆ,
ಏದುಸಿರಿನ ಎತ್ತುಗಳ ಘಂಟೆಯ ನಾದ
ಗರಡಿಯಲಿ ಸಡ್ಡುಹೊಡೆದು ಸೆಣಸಿದ
ಮಲ್ಲರ ಬೆವರಿನ ಕೆಮ್ಮಣ್ಣಿನ ಘಮಲು...

ದೋ ಎಂದು ತೊಳೆವ ಮಳೆಯಲ್ಲೂ
ಹಂಚಿನ ಸಂದಿಯಿಂದ ಸೂಸುವ ಹೊಗೆ
ಅಲ್ಲಲ್ಲಿ ಕಾಣುವ ಹೊಂಡಗಳ ಮೇಲೆ
ಪಚ್ಛೆ ಹಾಸಿದಂತಿದ್ದ ಹಸಿರೆಲೆ
ಎಣ್ಣೆ ಕೊಡೆ ದ್ಯಾಮವ್ವಾ ಎಂದುಲಿಯುವ
ದೀಪಗಳಂತ ಹುಡುಗಿಯರ ದನಿಯಮಲು!

ಮುಗಿಯದ ಚಿತ್ರಗಳ, ನೆನಪುಗಳ
ಒಮ್ಮೊಮ್ಮೆ ಕನಸಿನಂತೆ ಕಾಣುವ ಊರು
ಷಿಕಾರಿಪುರ!

- ಪ್ರಸನ್ನ  ರೇವನ್



Wednesday, April 05, 2017

ಮರ

ಹಸಿರೆಲೆಗಳ ನಡುವೆ ಹೊಳೆಯುತ್ತಿದ್ದ ಕೆಂಪು
ಹಣ್ಣಿನೆದೆಯಿಂದ ಹೊರಗೆಳೆದು
ತನ್ನ ಹೊಟ್ಟೆಯ ಬೆಚ್ಚನಿತ್ತು ಹಿಕ್ಕೆಯಾಗಿ
ಭೂಮಿಗಿತ್ತಿದ್ದು ಕಪ್ಪು ಕಾಜಾಣ

ಕಾರ್ಮೋಡಗಳ ಆರ್ಭಟಗಳ ನಡುವೆ
ಬೆನ್ನ ಮೇಲೊತ್ತು ಹರಿದು ಹರಡಿ
ಭೋರ್ಗರೆದು ಸುಳಿದಾಡಿ ಕೆಂಪು ಮಣ್ಣಿನ
ಅಪ್ಪುಗೆಗೆಯೊಪ್ಪಿಸಿದ್ದು ಕಪ್ಪು ನದಿ

ನೆಲದ ಕಸುವು, ಬೀಸುವ ತಂಬೆರಲಿನ
ತರು ಲತೆಗಳೊಡನಾಟದ ಟಿಸಿಲಾಟಗಳಿಗೆ
ಗೆಳೆಯರಾಗಿ ಬಂದು ಚಿಗುರ ಕಚ್ಚಿ ಹಿಗ್ಗಿ ಹರಡಿಸಿದವರು
ಕಪ್ಪು ಉಣ್ಣೆಯ ನಾಗಲಾಟದ ಮಿತ್ರರು!

ಹಿಗ್ಗಿ ಬೆಳೆದು ಮೇಘಗಳಿಗೆ ಮುತ್ತಿಕ್ಕಿ
ಸಂದು ಕೊರಕಲುಗಳಲ್ಲಿ ಮನೆಯನಿತ್ತು
ಕೋಟಿ ಮನಸುಗಳ ತಂದು ಮೈಮೇಲೆ
ಪುಟ್ಟ ಹೆಜ್ಜೆಯನಿಡಿಸಿದವರು
ಅಳಿಲು ಪಕ್ಷಿ ಕೀಟ ವಾನರ ಮೂಷಕರು!

ಕಿತ್ತು ಕತ್ತರಿಸಿ ಛೇದಿಸಿ ಉದುರಿಸಿ
ಬೀಳಿಸಿ ಬೇಧಿಸಿ ತಿಕ್ಕಿ ಗುದ್ದಿ ಹೊಡೆದು
ಹೇರಿ ಎಳೆಸಿ ಮುರಿದು ಕೊಳೆಸಿ
ಕೆಟ್ಟ ಮೂಲೆಗೆ ತಳ್ಳಿದವರು ಮಾನವರು

- ಪ್ರಸನ್ನ ರೇವನ್

Friday, August 05, 2016

'ಜಾನಿಸ್'

ಅದುರುವ ಕೈ ಒತ್ತಿ ಅದುಮಿ ಮೆಲ್ಲಗೆ 'ಕ್ರೈ ಬೇಬಿ' ಎಂದಳು
ಅವಳ ದನಿ ಸ್ವಲ್ಪ ದಪ್ಪ, ಕರ್ಕಶ ಎನಿಸಿದರೂ
ಅದರೊಳಗೆ ಕದಡಿದ ಹಸಿ ಅನುಭವಗಳ
ಮಾಧುರ್ಯದ ಇಂದ್ರಚಾಪದಿಂದ
ಎಂಥಾ ನೋವಾದರೂ ಪುನೀತ!
ಬದುಕಿನ ದಟ್ಟನೀಲಿ ದಿಗಂತದಲ್ಲಿ ಮಿಣುಕುವ
ಅವಳ ಟೇಲ್ ಲೈಟನ್ನು ಕನಸಿನಂತೆ ಹಿಂಬಾಲಿಸಿ
ನಿರ್ಜನ ತೀರದಲ್ಲಿ ಬಿಡಾರಹೂಡಿ
ನಕ್ಷತ್ರ ಹೊದ್ದು ಮಲಗಿ ಕಂಡಿದ್ದು
ಸಾವಿರ ಭಾವಗಳ ಸುದೀಪ್ತ ಜ್ವಾಲೆ!
ಲಕ್ಷ ಜನರ ನಡುವೆ ಹಾಡಿದರೂ ಏಕಾಂಗಿಯಾಗಿ
ಹೆಮ್ಮೆಯಿಂದ ನರಳಿದಳು
ಯಶದ, ಪ್ರೀತಿಯ ತೆಕ್ಕೆಯಿಂದ ಮೆಲ್ಲಗೆ ಜಾರುತ್ತಲೇ,
ಕಳೆದುಕೊಳ್ಳುವುದಕೇನು ಉಳಿಯದಿರುವುದೇ
ನಿರ್ಮುಕ್ತಿಯಲ್ಲವೇ ಎಂದು ನಕ್ಕವಳು
ಕೈಯಲ್ಲಿ ಕೈಹಿಡಿದು ಅಂತರಂಗದ ಅನಲವನ್ನು
ದಾಟಿಸುತ್ತಲೇ, ಕಡುಪ್ರೀತಿಯ ಕೆನ್ನಾಲಿಗೆಗಿರುವ
ಕನ್ನೈದಿಲೆಯಂತ ಮಾರ್ದವತೆಯ ದರ್ಶನ ಮಾಡಿಸುತ್ತಾ
ಲೋಕದ ನಿಯಮಗಳನ್ನು ಮುರಿದು ಮುಕ್ಕಿದ,
ನಿಯತಿಯನ್ನರಿಯದೆ ಪ್ರೇಮಜ್ವಾಲೆಯಲ್ಲೇ ಭಸ್ಮವಾದ
ಚೇತನ ನನ್ನ 'ಜೊಪ್ಲಿನ್'!
-ಪ್ರಸನ್ನ ರೇವನ್

ಹದಿಹರೆಯದವರು


ಭೋರ್ಗರೆವ ತೀರದ ಕಡೆಯಿಂದ 
ಬೀಸುವ ಬೆಚ್ಚಗಿನ ಗಾಳಿಗೆ ಮೆಲ್ಲನೆ ಜಾರುವ
ಮೈಗೆಲ್ಲಾ ಅಂಟಿದ ಪುಡಿಪುಡಿ ಮರಳು
ಇಲ್ಲೇ ಹಿಂದೊಂದು ತಿಳಿಗೊಳದೊಡಲಿನಲಿ
ಆಗಸಕೆ ಮುತ್ತಿಟ್ಟು ಮುಳುಗುವ ಮೀನು
ನೀಲಾಕಾಶದ ದಿಗಂತದಲ್ಲಿ ದಟ್ಟ ಕೆಂಪು!
ಉದ್ದ ಕಿನಾರೆಯ ದೂರದಲ್ಲಿ ಅಲ್ಲೆಲೋ
ಹರಡಿ ಬಿದ್ದ ಜೀನ್ಸು ಟಿ-ಶರ್ಟುಗಳು
ಅಮಲುಗಣ್ಣಿಗೆ ಕಾಣುವ ಪ್ರೇಮ, ದಾಹ, ತವಕ
ಎದೆಯೊಳಗೆ ಮಳ್ಳಗೆ ಕಾಯುವ ಪುಳಕ...
ನಾಗಮಂಡಲ ನೆನಪಿಸುವ ತೆಕ್ಕೆ
ಬಿಸಿಯುಸಿರು, ನೀರವ ಏಕಾಂತ
ಯಾರಿಗೂ ಹೆದರದ, ಕಾಯದ
ಕಾದ ಯೌವ್ವನ!